
ಶಿವಮೊಗ್ಗ : ಕರ್ನಾಟಕ ಸುಗಮ ಸಂಗೀತ ಬೆಂಗಳೂರು ಪರಿಷತ್ತು ವತಿಯಿಂದ ಆ.2 ಮತ್ತು 3 ರಂದು ಮೈಸೂರಿನ ಕಲಾಮಂದಿರ ಆವರಣದಲ್ಲಿ 19ನೇ ಸುಗಮ ಸಂಗೀತ ಸಮ್ಮೇಳನ ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಗಾಯಕ ನಗರ ಶ್ರೀನಿವಾಸ ಉಡುಪ ಅವರನ್ನು ಆಯ್ಕೆ ಮಾಡಲಾಗಿದೆ. ನಾಡಿನ 33 ಭಾಗಗಳಿಂದ 300ಕ್ಕೂ ಅಧಿಕ ಸುಗಮ ಸಂಗೀತ ಕಲಾವಿದರು, ಕವಿಗಳು ಭಾಗವಹಿಸಲಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಸುಗಮಸಂಗೀತ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಿ.ವಿ.ಪ್ರವೀಣ್ ತಿಳಿಸಿದ್ದಾರೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಆ.2 ರಂದು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಪರಿಷತ್ತು ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಆ.3 ರಂದು ಸಮಾರೋಪದಲ್ಲಿ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಸಿ.ಸೋಮಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರು ಆಯೋಜಿಸಿರುವ ಗೀತೋತ್ಸವ -19, ಸುಗಮ ಸಂಗೀತ ಸಮ್ಮೇಳನದಲ್ಲಿ ಶಿವಮೊಗ್ಗ ಜಿಲ್ಲೆಯ ಸುಗಮ ಸಂಗೀತ ಸದಸ್ಯರು ಗೀತೋತ್ಸವ ವೇದಿಕೆಯಲ್ಲಿ ಹಾಡಲಿದ್ದಾರೆ. ಏಕವ್ಯಕ್ತಿ ಗಾಯನದಲ್ಲಿ ಕೆ.ಯುವರಾಜ್, ಸುರೇಖಾ ಹೆಗಡೆ, ಜಯಶ್ರೀ ಶ್ರೀಧರ್, ಮಥುರಾ ನಾಗರಾಜ್, ಶುಭಾ ಹರ್ಷ, ಧನಪಾಲ್ ಸಿಂಗ್ ರಜಪೂತ್, ಸಾಕೇತ ಶಾಸ್ತ್ರಿ, ಸಾಗರದ ಸುನೀತಾ ಶ್ರೀಪಾದ ರಾವ್ ಹಾಗೂ ವೃಂದಗಾನ ವಿಭಾಗದಲ್ಲಿ ಉಮಾದಿಲೀಪ್, ಲಕ್ಷ್ಮೀಮಹೇಶ್, ನಳಿನಾಕ್ಷಿ, ಬಿಂದು ವಿಜಯಕುಮಾರ್, ಹೇಮಾ ಟಿ., ಮಂಜುನಾಥ್, ಜಿ.ವಿಜಯಕುಮಾರ್ ಬಸವರಾಜ್, ರಾಜಕುಮಾರ್, ಮುರಳಿಧರ್. ರಮಾ ಸುಬ್ರಹ್ಮಣ್ಯ. ದಾಕ್ಷಾಯಿಣಿ ರಾಜಕುಮಾರ್. ಶೋಭಾ ಸತೀಶ್ ಚಿಲಕಾದ್ರಿ ಹಳ್ಳಿ ಹಾಡಲಿದ್ದಾರೆ.
2023 ಮತ್ತು 2024ನೇ ಸಾಲಿನ ‘ಕಾವ್ಯಶ್ರೀ’ ಮತ್ತು ‘ಭಾವಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ‘ಕಾವ್ಯಶ್ರೀ’ ಪ್ರಶಸ್ತಿಗೆ ಕವಿಗಳಾದ ಬಿ.ಆರ್.ಲಕ್ಷ್ಮಣರಾವ್, ಡಾ. ನಾ.ದಾಮೋದರ ಶೆಟ್ಟಿ ಹಾಗೂ ‘ಭಾವಶ್ರೀ’ ಪ್ರಶಸ್ತಿಗೆ ಗಾಯಕಿಯರಾದ ಶ್ರೀಮತಿ ರತ್ನಮಾಲಾ ಪ್ರಕಾಶ್ ಮತ್ತು ಶ್ರೀಮತಿ ಕೆ.ಎಸ್.ಸುರೇಖಾ ಅವರನ್ನು ಆಯ್ಕೆ ಮಾಡಲಾಗಿದೆ.
ಹಿರಿಯ ಸಾಹಿತಿಗಳಾದ ಡಾ. ಹಂಪ ನಾಗರಾಜಯ್ಯ, ಸಿ.ಪಿ.ಕೃಷ್ಣಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪರಿಷತ್ತಿನ ಗೌರವ ಖಜಾಂಚಿ ಪ್ರಶಾಂತ ಉಡುಪ ಪ್ರಕಟಿಸಿದ್ದಾರೆ. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಗೀತೋತ್ಸವ ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಶ್ರೀಮತಿ ಶಾಂತಾ ಶೆಟ್ಟಿ ವಿನಂತಿಸಿದ್ದಾರೆ.