
ಶಿವಮೊಗ್ಗ : ಕರ್ನಾಟಕ ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ 2026-27ನೇ ಸಾಲಿಗೆ ಜಿಲ್ಲೆಯ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರಿಗೆ ವಾರ್ಷಿಕ ರೂ.5,000/-ಗಳ ಆರ್ಥಿಕ ನೆರವು ನೀಡುವ “ನೇಕಾರರ ಸಮ್ಮಾನ್ ಯೋಜನೆ” ಅಡಿಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ » ಆಗಸ್ಟ್ 7, ರಾಷ್ಟ್ರೀಯ ಕೈಮಗ್ಗ ದಿನಾಚರಣೆ, ಏನಿದರ ಇತಿಹಾಸ? ಇಲ್ಲಿದೆ ಮಾಹಿತಿ
ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. 2025-26ನೇ ಸಾಲಿನಲ್ಲಿ ನೋಂದಣಿ ಆಗದೆ ಇರುವ ಅರ್ಹ ಹೊಸ ನೇಕಾರರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. 4ನೇ ರಾಷ್ಟ್ರೀಯ ಕೈಮಗ್ಗ ಗಣತಿ ಪಟ್ಟಿಯಲ್ಲಿ ನೋಂದಾಯಿತರಾಗಿ ‘ಪೆಹಚಾನ್ ಕಾರ್ಡ್’ ಹೊಂದಿರಬೇಕು ಹಾಗೂ ಪ್ರಸ್ತುತ ನೇಕಾರಿಕೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಬೇಕು. ಪಿಎಂಜೆಜೆಬಿವೈ-ಪಿಎಂಎಸ್ಬಿವೈ ಯೋಜನೆಯಡಿ ನೇಕಾರರು ಕಡ್ಡಾಯವಾಗಿ ನೋಂದಾಯಿಸಿಕೊಂಡಿರಬೇಕು.
ಅರ್ಹ ನೇಕಾರರು ನಿಗದಿತ ನಮೂನೆಯಲ್ಲಿ ತಮ್ಮ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ವಿವರಗಳೊಂದಿಗೆ ದಿನಾಂಕ: 30.06.2026 ರ ಒಳಗೆ ಉಪ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಮಂಜುನಾಥ್ ಟವರ್ಸ್, 2ನೇ ಮಹಡಿ, ಗಾಂಧಿ ನಗರ, 1ನೇ ಮುಖ್ಯ ರಸ್ತೆ, ಶಿವಮೊಗ್ಗ – 577201 ಅರ್ಜಿ ಸಲ್ಲಿಸಬೇಕು.
ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರ ವಿವರಗಳನ್ನು ಸರ್ಕಾರದ ‘ಸೇವಾಸಿಂಧು’ ಪೋರ್ಟಲ್ನಲ್ಲಿ ಭರ್ತಿ ಮಾಡಿ ನೇರವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 08182-223405 ಅನ್ನು ಸಂಪರ್ಕಿಸಬಹುದು ಅಥವಾ ಖುದ್ದಾಗಿ ಕಚೇರಿಗೆ ಭೇಟಿ ನೀಡಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ/ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ » 14 ಗ್ರಾಮ ಪಂಚಾಯತಿ ಅರಿವು ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ