
ಶಿವಮೊಗ್ಗ : ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾದ ಅದ್ದೂರಿ ಆಚರಣೆಗೆ ಭರದ ಸಿದ್ದತೆ ನಡೆದಿದ್ದು, 11 ದಿನಗಳ ಕಾಲ ಅತ್ಯಂತ ಸಡಗರ-ಸಂಭ್ರಮ-ವಿಜೃಂಭಣೆಯಿಂದ ದಸರಾವನ್ನು ಆಚರಿಸಲು ಮಹಾನಗರ ಪಾಲಿಕೆ ಸಕಲ ರೀತಿಯಲ್ಲೂ ಸನ್ನದ್ಧವಾಗಿದೆ.
ಮೈಸೂರು ಬಿಟ್ಟರೆ ಶಿವಮೊಗ್ಗ ದಸರಾವೇ ರಾಜ್ಯದಲ್ಲಿ ಅತ್ಯಂತ ಹೆಸರಾಗಿದೆ. ಶಿವಮೊಗ್ಗದಲ್ಲಿ ಸೆ.22 ರಿಂದ ಅ.02 ರವರೆಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು. ಈಗಾಗಲೇ ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸುಮಾರು 14 ಸಮಿತಿಯನ್ನು ರಚಿಸಲಾಗಿದೆ. ಎಲ್ಲಾ ಸಮಿತಿಗಳು ಕ್ರೀಯಾಶೀಲವಾಗಿವೆ ಅಂಬಾರಿ ಕೂಡ ವಿಶೇಷವಾಗಿ ನಡೆಯಲಿದೆ.
– ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕರು
ದಸರಾ ಆಚರಣೆಗೆ ಪ್ರಮುಖವಾಗಿ ಸ್ವಾಗತ ಸಮಿತಿ, ಉತ್ಸವ ಸಮಿತಿ, ಮಹಿಳಾ ಹಾಗೂ ಗಮಕ ದಸರಾ ಸಮಿತಿ, ಅಲಂಕಾರ ದಸರಾ ಸಮಿತಿ, ಸಾಂಸ್ಕೃತಿಕ ದಸರಾ ಸಮಿತಿ, ಯುವದಸರಾ ಸಮಿತಿ, ಪರಿಸರ ಮತ್ತು ಪೌರಕಾರ್ಮಿಕರ ದಸರಾ ಸಮಿತಿ, ಯೋಗ ದಸರಾ ಸಮಿತಿ, ರಂಗದಸರಾ ಸಮಿತಿ, ರೈತದಸರಾ ಸಮಿತಿ, ಆಹಾರ ದಸರಾ ಸಮಿತಿ, ಚಲನಚಿತ್ರ ಹಾಗೂ ಪತ್ರಿಕಾ ದಸರಾ ಸಮಿತಿ, ಮಕ್ಕಳ ದಸರಾ ಸಮಿತಿ, ಕಲಾ ಮತ್ತು ಜ್ಞಾನ ದಸರಾ ಸಮಿತಿಗಳು ಇದ್ದು, ಈ ಎಲ್ಲಾ ಸಮಿತಿಗಳು ತಮ್ಮ ತಮ್ಮ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಡಲಿದ್ದಾರೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಪತ್ರಿಕಾಗಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ದಸರಾ ಆಚರಣೆಯ ಕಾರ್ಯಕ್ರಮಗಳ ವಿವರ ಮತ್ತು ಸಿದ್ಧತೆಯ ಸಂಪೂರ್ಣ ವಿವರ ನೀಡಿದರು.
ಯಾವ ದಿನದಂದು ಏನೆಲ್ಲಾ ಕಾರ್ಯಕ್ರಮ ನಡೆಯಲಿವೆ:
ಸೆ.22 ರಂದು ಬೆಳಿಗ್ಗೆ 10.00 ಗಂಟೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಈ ಬಾರಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಆಗಿರುವ ಬಗ್ಗವಳ್ಳಿ ಸೋಮಶೇಖರ ರಾಜು ಅವರು ದಸರಾ ಉದ್ಘಾಟನೆಯನ್ನು ನಡೆಸುವರು. ಇವರು ತರಿಕೆರೆಯವರು. ಭಾರತೀಯ ಸೈನ್ಯಕ್ಕೆ ತನ್ನದೇ ಆದ ಶಕ್ತಿಯನ್ನು ತುಂಬಿದವರು. ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಇಂತಹವರು ದಸರಾವನ್ನು ಉದ್ಘಾಟಿಸುತ್ತಿರುವುದು ಹೆಮ್ಮೆಯ ವಿಷಯ ಎಂದ ಅವರು, ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಸೇರಿದಂತೆ ಎಲ್ಲಾ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಈ ಎಲ್ಲಾ ಮುಖಂಡರು ಉಳಿದ ಎಲ್ಲಾ ಸಮಾರಂಭಗಳ ಮುಖ್ಯ ಅತಿಥಿಗಳು ಹಾಗೂ ವಿಶೇಷ ಆಹ್ವಾನಿತರು ಆಗಿದ್ದಾರೆ ಎಂದರು.
ಸೆ.23 ರಂದು ಮಕ್ಕಳ ದಸರಾ, ಸುಗಮ ಸಂಗೀತ, ಯಕ್ಷಸಂಭ್ರಮ ನಡೆಯುತ್ತದೆ. ಸರಿಗಮಪ ಖ್ಯಾತಿಯ ಕುಮಾರಿ ದಿಯಾ ಹೆಗಡೆ ಹಾಗೂ ಅಂತರಾಷ್ಟ್ರೀಯ ನೃತ್ಯಗಾರ್ತಿ ಕು. ಋತುಸ್ಪರ್ಶ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಸೆ.24 ರ ಬುಧವಾರ ನಡೆಯಲಿರುವ ವಿವಿಧ ದಸರಾ ಕಾರ್ಯಕ್ರಮಗಳಲ್ಲಿ ಚಲನಚಿತ್ರ ನಟರುಗಳಾದ ಶರಣ್, ಕಾರುಣ್ಯರಾವ್, ಸಾಯಿಪ್ರಕಾಶ್, ರೂಪ ಅಯ್ಯರ್, ಗಣೇಶ್ ಮಂದಾರ್ತಿ ಮುಂತಾದವರು ಭಾಗವಹಿಸಲಿದ್ದಾರೆ.
ಸೆ.25 ರಂದು ರೈತ ದಸರಾ, ಕಲಾ ದಸರಾ ನಡೆಯಲಿದೆ. ಸೆ.25 ರಂದು ಕಲಾ ದಸರಾ ಕಾರ್ಯಕ್ರಮ ಸಹ ನಡೆಯಲಿದ್ದು, ಅಂದು ಸಂಜೆ 6.00 ಗಂಟೆಗೆ ಶಿವಪ್ಪ ನಾಯಕ ಅರಮನೆಯಲ್ಲಿ ನಡೆಯಲಿದ್ದು, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವರಪುರ ಉದ್ಘಾಟಿಸುವರು. ಸೆ.26 ರಂದು ಸಂಜೆ 5.00 ಗಂಟೆಗೆ ಶಿವಪ್ಪನಾಯಕ ಅರಮನೆಯಲ್ಲಿ ನಡೆಯಲಿರುವ ನಗೆಹಬ್ಬ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಭಾಗವಹಿಸುವರು. ಸೆ.27 ರಂದು ಬೆಳಿಗ್ಗೆ 10.00 ಗಂಟೆಗೆ ಪೌರ ಕಾರ್ಮಿಕರ ದಸರಾ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದ್ದು, ಪತ್ರಕರ್ತ ಎನ್.ರವಿಕುಮಾರ್ ಉದ್ಘಾಟಿಸುವರು ಎಂದರು.
ಹಾಗೆಯೇ ಸೆ.28 ರಂದು ಯೋಗದಸರಾ ಗಮಕ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5.00 ಗಂಟೆಗೆ ಪತ್ರಿಕಾ ಭವನದಲ್ಲಿ ಪತ್ರಕರ್ತರ ದಸರಾ ನಡೆಯಲಿದ್ದು, ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಸಂಘದ ಅಧ್ಯಕ್ಷ ಕೆ.ವಿ. ಶಿವಕುಮಾರ್, ನಿರ್ದೇಶಕ ಎನ್. ರವಿಕುಮಾರ್ ಭಾಗವಹಿಸುವರು.ಸೆ.೨೮ರಂದು ಸಂಜೆ ೫ ಗಂಟೆಗೆ ಅಲ್ಲಮಪ್ರಭು(ಫ್ರೀಡಂಪಾರ್ಕ್) ಮೈದಾನದಲ್ಲಿ ಮ್ಯೂಸಿಕಲ್ ನೈಟ್ ನಡೆಯಲಿದ್ದು, ಖ್ಯಾತ ನಟ ಡಾ. ಶಿವರಾಜ್ಕುಮಾರ್ ಭಾಗವಹಿಸುವರು. ಇವರ ಜೊತೆಗೆ ಸಚಿವ ಮಧುಬಂಗಾರಪ್ಪ ಕೂಡ ಉಪಸ್ಥಿತರಿರುತ್ತಾರೆ. ಅಂದು ಅಲ್ಲಿ ಆಹಾರ ಮೇಳ ಕೂಡ ಇರುತ್ತದೆ ಎಂದರು.
ಸೆ.29 ರಂದು ಬೆಳಿಗ್ಗೆ 10.30 ಕ್ಕೆ ಶಿವಪ್ಪನಾಯಕ ವೃತ್ತದಲ್ಲಿ ಸಾರ್ವಜನಿಕರಿಗೆ ಆಹಾರ ತಿನ್ನುವ ಸ್ಪರ್ಧೆ ನಡೆಯಲಿದೆ. ಹಾಗೆಯೇ ಸಂಜೆ 6.00 ಗಂಟೆಗೆ ಗೀತ ನೃತ್ಯವೈಭವ ಕಾರ್ಯಕ್ರಮ, ಅಲ್ಲಮಪ್ರಭು ಮೈದಾನದಲ್ಲಿ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಮುಂತಾದವರು ಭಾಗವಹಿಸುವರು.
ಸೆ.30 ರಂದು ಕಲಾ ಮತ್ತು ಜ್ಞಾನ ದಸರಾ ಕುವೆಂಪು ರಂಗಮಂದಿರದಲ್ಲಿ, ಅಡುಗೆ ಮಾಡುವ ಸ್ಪರ್ಧೆ ವೀರಶೈವ ಕಲ್ಯಾಣ ಮಂಟಪದಲ್ಲಿ, ಸಂಜೆ 5.30ಕ್ಕೆ ಫ್ರೀಡಂಪಾರ್ಕ್ನಲ್ಲಿ ನಾದವೈಭವ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಚಲನಚಿತ್ರ ನಟಿ ಗೀತಾ ಇದರಲ್ಲಿ ಭಾಗವಹಿಸುತ್ತಾರೆ.
ಅ.01 ರಂದು ಸಂಜೆ 5.00 ಗಂಟೆಗೆ ಇಲ್ಲಿಯೇ ನಡೆಯುವ ನಾಟ್ಯವೈಭವ ಕಾರ್ಯಕ್ರಮದಲ್ಲಿ ನಟಿ ಹರ್ಷಿತಾ ಪೂರ್ಣಚ್ಚ ಆಗಮಿಸುವರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಎಸ್.ಈಶ್ವರಪ್ಪ ಭಾಗವಹಿಸಲಿದ್ದಾರೆ. ಅ.02 ರಂದು ಸಂಜೆ ೫ಗಂಟೆಗೆ ಸುರೇಖಾ ಹೆಗಡೆ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಆಯೋಜಿಸಲಾಗಿದೆ ಎಂದರು.
ಅ.02 ರಂದು ದಸರಾ ಮಹೋತ್ಸವದ ಅಂಬಾರಿ ಮೆರವಣಿಗೆ ಮಧ್ಯಾಹ್ನ 2.30 ಕ್ಕೆ ಆರಂಭವಾಗುತ್ತದೆ. ಅಂಬಾರಿ ಮೆರವಣಿಗೆಯಲ್ಲಿ ಈ ಬಾರಿ ಮೂರು ಆನೆಗಳಾದ ಸಾಗರ್, ಬಾಲಣ್ಣ, ಕುಂತಿ ಭಾಗವಹಿಸಲಿದ್ದು, ಸಾಗರ್ ಅಂಬಾರಿ ಹೋರಲಿದ್ದಾರೆ. ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ಅಂಬಾರಿ ಮೆರವಣಿಗೆಗೆ ಶಿವಪ್ಪನಾಯಕ ಅರಮನೆ ಆವರಣದಲ್ಲಿ ನಂದಿಧ್ವಜ ಪೂಜೆ ನಡೆಯಲಿದೆ. ನಂತರ ಸಂಜೆ ಅಲ್ಲಮಪ್ರಭು ಮೈದಾನದಲ್ಲಿ ಬನ್ನಿಮುಡಿಯುವ ಕಾರ್ಯಕ್ರಮಕ್ಕೆ ತಹಶೀಲ್ದಾರ್ ವಿ.ಎಸ್.ರಾಜೀವ್ ಚಾಲನೆ ನೀಡುವರು. ಈ ಕಾರ್ಯಕ್ರಮದಲ್ಲಿ ಅತ್ಯಾಕರ್ಷಕ ಸಿಡಿಮದ್ದು ಮತ್ತು ರಾವಣ ದಹನವನ್ನು ಏರ್ಪಡಿಸಲಾಗಿದೆ. ಸಚಿವರುಗಳಾದ ಮಧುಬಂಗಾರಪ್ಪ ಹಾಗೂ ಶಿವರಾಜ್ ಎಸ್. ತಂಗಡಗಿ, ಬಿ.ಎಸ್. ಸುರೇಶ್, ರಹೀಂಖಾನ್ ಭಾಗವಹಿಸುವರು ಎಂದರು.