
ಶಿವಮೊಗ್ಗ : ಭದ್ರಾ ಅಣೆಕಟ್ಟೆಯಿಂದ ಚಿಕ್ಕಮಂಗಳೂರು ಮತ್ತು ಚಿತ್ರದುರ್ಗ ಜಿಲ್ಲೆಯ ಹಳ್ಳಿಗಳಿಗೆ ಕುಡಿಯುವ ನೀರು ಕೊಡಲು ನಮ ರೈತ ಸಂಘದ ವಿರೋಧವಿಲ್ಲ, ಆದರೆ ಭದ್ರಾ ಬಲದಂಡೆಯಿಂದ ನೀರು ಕೊಡಲು ವಿರೋಧ, ಹಾಗೂ ಈಗ ಹಾಲಿ ಸೀಳಿರುವ ಬಲದಂಡೆಯನ್ನು ತಕ್ಷಣವೇ ಗೋಡೆ ನಿರ್ಮಿಸಿ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಹೆಚ್.ಆರ್.ಬಸವರಾಜಪ್ಪ ಆಗ್ರಹಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲೆಯಿಂದ ನೀರು ಕೊಡುವ ಬದಲು ನದಿಯಿಂದ ನೀರು ಕೊಡಬೇಕು ಎಂಬುದು ನಮ್ಮ ಒತ್ತಾಯ. ತಕ್ಷಣದಿಂದ ಸೀಳಿರುವ ಬಲದಂಡೆಯನ್ನು ಉನ್ನತ ಮಟ್ಟದ ತಾಂತ್ರಿಕ ಸಮಿತಿಯಿಂದ ವರದಿ ಪಡೆದು ಅಲ್ಲಿ ಜು.15 ರೊಳಗೆ ಗೋಡೆಯನ್ನು ನಿರ್ಮಿಸಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಬೆಳೆಯಲು ನೀರು ಹರಿಸಬೇಕು. ಮತ್ತು ಭದ್ರಾ ಎಡದಂಡೆಗೆ ಹೊಸ ಗೇಟ್ನ್ನು ಸಹ ತಕ್ಷಣವೇ ಅಳವಡಿಸಿ ಎಡದಂಡೆಗೂ ಸಹ ನೀರು ಹರಿಸಬೇಕು ಎಂದರು.
ವಿದ್ಯುತ್ ಖರ್ಚು ಉಳಿಸುವುದಕೋಸ್ಕರ ನಾಲೆಯಿಂದ ನೀರು ಕೊಡುವ ತೀರ್ಮಾನ ಸರಿಯಲ್ಲ. ಅದರ ಬದಲಾಗಿ ನದಿ ಪಾತ್ರದಿಂದಲೇ ಜಾಕ್ವೆಲ್ ಮುಖಾಂತರ ನೀರು ಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ವರ್ಷ ಭದ್ರಾ ಅಣೆಕಟ್ಟೆಯಲ್ಲಿ ಇವತ್ತಿಗೆ 157 ಅಡಿ ನೀರು ಇದ್ದು, 40 ಟಿ.ಎಂ.ಸಿ ನೀರು ಸಂಗ್ರಹವಾಗಿದ್ದು ಅಣೆಕಟ್ಟಿಗೆ ಒಳಹರಿವು ಹೆಚ್ಚಾಗಿದ್ದು, ಶೀಘ್ರದಲ್ಲಿ ಅಣೆಕಟ್ಟು ತುಂಬುವ ಆಶಾಭಾವನೆ ಇದೆ. ಪ್ರತಿ ವರ್ಷ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಬೆಳೆಯಲು ಆಣೆಕಟ್ಟು ತುಂಬಿದಾಗ ಜು.15 ರಿಂದಲೇ ನೀರು ಬಿಟ್ಟಿರುವ ಉದಾಹರಣೆ ಇದೆ. ಈ ವರ್ಷವು ಸಹ ಅಣೆಕಟ್ಟೆ ತುಂಬುವುದರಿಂದ ಜು.15 ರಿಂದಲೇ ನೀರು ಬಿಡಬೇಕಾಗಿದೆ.
| ಹೆಚ್.ಆರ್.ಬಸವರಾಜಪ್ಪ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರು
ಚಿಕ್ಕಮಂಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳ 1236 ಹಳ್ಳಿಗಳಿಗೆ ಮತ್ತು ಹೊಸದುರ್ಗಾ ಪಟ್ಟಣಕ್ಕೆ ಜಲಜೀವನ್ ಮಿಷನ್ ಅಡಿಯಲ್ಲಿ 1600 ಕೋಟಿ ವೆಚ್ಚದಲ್ಲಿ ನಾಲೆಯಿಂದ ದಿನ 30 ಕ್ಯೂಸೆಕ್ಸ್ ನಂತೆ ವರ್ಷವಿಡಿ 1 ಟಿ.ಎಂ.ಸಿ ಕುಡಿಯುವ ನೀರು ಮಂಜೂರಾಗಿದೆ. ಭದ್ರಾ ಜಲಾಶಯದ ಮುಂಭಾಗದ ಪವರ್ ಹೌಸ್ ಬಳಿ ಬಲದಂಡೆ ಕಾಲುವೆಯಿಂದ ನೀರು ಪಡೆದು ಅಲ್ಲಿಯೇ ಸ್ವಲ್ಪ ದೂರದಲ್ಲಿ 8 ಎಕರೆ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಶುದ್ಧೀಕರಣ ಘಟಕಕ್ಕೆ ಪೂರೈಸಲಾಗುತ್ತಿದೆ. ಈ ಯೋಜನೆಗೆ 2020 ರಲ್ಲಿ ಮಂಜೂರಾತಿ ಸಿಕ್ಕಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾಮಗಾರಿ ಕೈಗೆತ್ತಿಕೊಂಡಿದೆ. ಬಲದಂಡೆ ನಾಲೆಯಿಂದ ಅಣೆಕಟ್ಟು ಹತ್ತಿರದಲ್ಲಿಯೇ ಬಲದಂಡೆ ಮಣ್ಣು ಬಲಹೀನ ಆಗಿರುವ ಸ್ಥಳದಲ್ಲಿ ಸೀಳಿ ನೀರು ಬಿಟ್ಟರೆ ಮುಂದೆ ಆ ಜಾಗದಲ್ಲಿ ಬಲದಂಡೆ ನಾಲೆಯೇ ಹೊಡೆದು ಹೋಗುವ ಅಪಾಯವಿದೆ. ಆದ್ದರಿಂದ ಅದರ ಬದಲಾಗಿ ನದಿ ಪಾತ್ರದಿಂದ ನೀರು ಕೊಡಲು ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹಿಟ್ಟೂರು ರಾಜು, ರಾಘವೇಂದ್ರ, ಹನುಮಂತಪ್ಪ, ರವಿ, ಚಂದ್ರಪ್ಪ, ಮಂಜಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.