
ಶಿವಮೊಗ್ಗ : ಶಿವಮೊಗ್ಗ ನಗರದ ನವುಲೆ ಕೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ಗೋವಾ ತಂಡಗಳ ನಡುವೆ ರಣಜಿ ಟ್ರೋಫಿ ಪಂದ್ಯವನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ವತಿಯಿಂದ ಅ.25 ರಿಂದ 28 ರವೆಗೆ ಆಯೋಜಿಸಲಾಗಿದೆ ಎಂದು ವಲಯ ಸಂಚಾಲಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ತಂಡವು ರಣಜಿ ಟ್ರೋಫಿಯನ್ನು ಎಂಟು ಬಾರಿ ಗೆದ್ದಿದೆ. ಮುಂಬೈ (ಬಾಂಬೆ) 42 ಪ್ರಶಸ್ತಿಗಳೊಂದಿಗೆ ಅತ್ಯಂತ ಯಶಸ್ವಿ ತಂಡವಾಗಿದ್ದು ಅದರ ನಂತರ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಭಾರತೀಯ ದೇಶೀಯ ಕ್ರಿಕೆಟ್ನಲ್ಲಿ ಮಹತ್ವದ ಸ್ಥಾನವನ್ನು ಕಾಪಾಡಿಕೊಂಡಿದೆ.
– ಡಿ.ಎಸ್.ಅರುಣ್, ವಲಯ ಸಂಚಾಲಕರು ಹಾಗೂ ವಿಧಾನ ಪರಿಷತ್ ಸದಸ್ಯರು

ರಣಜಿ ಟ್ರೋಫಿ ಬಂದಿದ್ದು ಹೇಗೆ :
ರಣಜಿ ಟ್ರೋಪಿ ಭಾರತೀಯ ಕ್ರಿಕೆಟ್ನ ರಾಷ್ಟ್ರೀಯ ಮಟ್ಟದ ಅತ್ಯಂತ ಪ್ರಾಚೀನ ಹಾಗೂ ಗೌರವಾನ್ವಿತ ಪ್ರಥಮ ದರ್ಜೆ ಕ್ರಿಕೆಟ್ ಸ್ಪರ್ಧೆಯಾಗಿದ್ದು, ಈ ಸ್ಪರ್ಧೆಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ 1934 ರಲ್ಲಿ ಪ್ರಾರಂಭಿಸಿದರು. ಇದಕ್ಕೆ ಭಾರತ ಕ್ರಿಕೆಟ್ ಚಾಂಪಿಯನ್ ಶಿಪ್ ಎಂಬ ಹೆಸರನ್ನು ಕೊಟ್ಟರೂ ನಂತರ ಇಂಗ್ಲೆಂಡ್ ಪರವಾಗಿ 1896 ರಿಂದ 1902 ರವರೆಗೆ ಕ್ರಿಕಟ್ ಆಡಿದ್ದ ಕುಮಾರ್ ರಂಜಿತ್ ಸಿಂಗ್ಜಿಯ ಸ್ಮರಣಾರ್ಥವಾಗಿ ರಣಜಿ ಟ್ರೋಪಿ ಎಂದು ಮರು ಹೆಸರಿಸಲಾಯಿತು ಎಂದರು.
ರಣಜಿ ಟ್ರೋಫಿಯ ರಚನೆ ಭಾರತದಲ್ಲಿ ರಾಜ್ಯಗಳ ಮತ್ತು ಪ್ರದೇಶಗಳ ಪುನರ್ ವ್ಯವಸ್ಥೆಯೊಂದಿಗೆ ಕ್ರಮೇಣ ವಿಕಸಿತವಾಯಿತು. ಮೊದಲಿನಿಂದಲೇ ರಾಜ್ಯ ಮತ್ತು ಪ್ರಾದೇಶಿಕ ಕ್ರಿಕೆಟ್ ಸಂಘಗಳ ತಂಡಗಳು ಪಾಲ್ಗೊಂಡರೂ. ನಂತರ ರೈಲ್ವೆ ಮತ್ತು ಸರ್ವಿಸ್ಗಳಂತಹ ರಾಷ್ಟ್ರೀಯ ಸಂಸ್ಥೆಗಳ ತಂಡಗಳು ಕೂಡ ಸೇರಿಕೊಂಡುವು ಎಂದರು.
ಪ್ರಸ್ತುತ 38 ತಂಡಗಳು ಭಾರತದ 28 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪುದೇಶಗಳನ್ನು ಸೇರಿ ಭಾಗವಹಿಸುತ್ತಿವೆ. ಇವರಲ್ಲಿ ಕರ್ನಾಟಕ ಕ್ರಿಕೆಟ್ ಸಂಘವೂ ಒಂದು ಪ್ರಮುಖ ಸದಸ್ಯವಾಗಿದೆ. ಈ ಟೂರ್ನಿಯಲ್ಲಿನ ಪ್ರದರ್ಶನವನ್ನು ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರವೇಶದ ಪ್ರಮುಖ ಹಾದಿಯಾಗಿ ಪರಿಗಣಿಸಲಾಗುತ್ತದೆ. 2020-21 ರ ಸೀಸನ್ ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ರದ್ದು ಪಡಿಸಲಾಗಿತ್ತು ಎಂದರು.
1990 ರ ದಶಕದಲ್ಲಿ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಜವಗಲ್ ಶ್ರೀನಾಥ್ ಅವರ ಕಾಲದಲ್ಲಿ ಕರ್ನಾಟಕದ ಕ್ರಿಕೆಟ್ ಉಜ್ವಲವಾಗಿತ್ತು. ಇತ್ತೀಚಿನ ಕಾಲದಲ್ಲಿ, 2013-14 ಮತ್ತು 2014-15 ರಲ್ಲಿ ಬ್ಯಾಕ್ ಟು ಬ್ಯಾಕ್ ಪುಶಸ್ತಿಗಳನ್ನು ಗೆದ್ದು ರಾಜ್ಯ ತಂಡ ತನ್ನ ಶ್ರೇಷ್ಠತೆಯನ್ನು ಮತ್ತೆ ತೋರಿಸಿತು ಎಂದರು.
ಶಿವಮೊಗ್ಗ ನಡೆಯುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಕರ್ನಾಟಕ ತಂಡದಲ್ಲಿ ಮಯಾಂಕ್ ಅಗ್ರವಾಲ್ ತಂಡದ ನಾಯಕರಾಗಿ, ಕರುಣ್ ನಾಯರ್, ಸಮ್ರಾನ್.ಆರ್.ಶ್ರೀಜಿತ್ ಕೆ.ಎಲ್. ಶ್ರೇಯಸ್ ಗೋಪಾಲ್, ವಿದ್ವಾತ್ ಕಾವೇರಪ್ಪ, ಯಶೋವರ್ಧನ್ ಪರಂತಪ್, ಅಭೀಲಾಶ್ ಶೆಟ್ಟಿ, ವೆಂಕಟೇಶ್ ಎಮ್. ನಿಕಿನ್ ಜೋಶ್ ಎಸ್.ಜೆ., ಅಭಿನವ್ ಮನೋವರ್, ಕೃತಿಕ್ ಕೃಷ್ಣ, ಅನೀಶ್ ಕೆ.ವಿ. ಮೊಹಶಿನ್ ಖಾನ್, ಶಿಖರ್ ಶೆಟ್ಟಿ ಹಾಗೂ ಗೋವಾ ತಂಡದಲ್ಲಿ ದೀಪ್ರಾಜ್ ಗಾಂವ್ಕರ್ ತಂಡದ ನಾಯಕರಾಗಿ, ಲಲಿತ್ ಯಾದವ್, ಸಮರ್ ದುಭಾಷಿ, ಸುಯಶ್ ಎಸ್.ಪ್ರಭಾದೇಸಾಯಿ, ಮಂಥನ್ ಖುತ್ಕರ್, ಕಶ್ಯಪ್ ಬಾಕ್ಲೆ, ದರ್ಶನ್ ಮಿಸಲ್, ಮೋಹಿತ್ ರೆಡ್ಕರ್, ಅಭಿನವ್ ತೇಜ್ರಾನಾ, ಅರ್ಜುನ್ ತೆಂಡೂಲ್ಕರ್, ಹೆರಾಂಬ್ ಪರಬ್, ವಿಕಾಶ್ ಸಿಂಗ್, ಇಶಾನ್ ಗಡೇಕರ್, ರಾಜಶೇಖರ್ ಹರಿಕಾಂತ್, ವಿಜೇಶ್ ಪ್ರಭುದೇಸಾಯಿ, ವಾಸುಕಿ ಕೌಶಿಕ್, ಸ್ನೇಹಲ್ ಕೌತಾಂಕರ್ ಭಾಗವಹಿಸಲಿದ್ದಾರೆ. ಶಿವಮೊಗ್ಗ ಜನತೆ ಹಾಗೂ ಕ್ರಿಕೆಟ್ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕ್ರಿಕೆಟ್ ಹಬ್ಬವನ್ನು ಸಂಭ್ರಮಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಲಯ ಸಂಚಾಲಕರಾದ ಹೆಚ್.ಎಸ್.ಸಂದಾನಂದ, ಡಿ.ಆರ್.ನಾಗರಾಜ್, ವಲಯಾಧ್ಯಕ್ಷರಾದ ರಾಜೇಶ್ ಕಾಮತ್, ಐಡಿಯಾಲ್ ಗೋಪಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.