
ಶಿವಮೊಗ್ಗ : ಮುಸ್ಲಿಂರಿಗೆ ವಸತಿ ಯೋಜನೆಯಲ್ಲಿ ಶೇ.15 ರಷ್ಟು ಮೀಸಲಾತಿಯ ರಾಜ್ಯ ಸರ್ಕಾರದ ತೀರ್ಮಾನವನ್ನು ಪ್ರಾಣ ಹೋದರೂ ಜಾರಿಯಾಗಲು ಬಿಡುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರ ಭಕ್ತರ ಬಳಗದ ಸಂಚಾಲಕರಾದ ಕೆ.ಎಸ್.ಈಶ್ವರಪ್ಪ ಗುಡುಗಿದರು.
ಇಂದು ರಾಷ್ಟ್ರಭಕ್ತ ಬಳಗವು ವಿವಿಧ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ರಾಜ್ಯದ ವಸತಿ ಯೋಜನೆಗಳಲ್ಲಿ ಅಸಂವಿಧಾನಿಕವಾಗಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಿಸಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ, ನಗರದ ರಾಮಣ್ಣಶ್ರೇಷ್ಠಿ ಪಾರ್ಕ್ನಿಂದ ಶಿವಪ್ಪನಾಯಕ ವೃತ್ತದವರೆಗೆ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ಜರಿಗೆ ತಂದ ಶೇ.15 ರಷ್ಟು ಮೀಸಲಾತಿಗೆ ಯಾವ ಬೆಲೆಯೂ ಇಲ್ಲ. ಇದು ಕೇವಲ ಮುಸ್ಲಿಂ ಓಲೈಕೆಯಾಗಿದೆ. ಇದರ ವಿರುದ್ಧ ರಾಜದ್ಯಂತ ಸಹಿಸಂಗ್ರಹಿಸಿ ರಾಜ್ಯಪಾಲರಿಗೆ ಕೊಡುತ್ತೇವೆ. ಕಳೆದವರ್ಷ ಮುಸ್ಲಿಂರಿಗೆ 900 ಕೋಟಿ ರೂ. ಅನುದಾನವನ್ನು ನೀಡಿ, ಈ ವರ್ಷ 1300 ಕೋಟಿ ರೂ. ಅನುದಾನವನ್ನು ನೀಡಿದ್ಯಾಕೆ ಎಂದು ಪ್ರಶ್ನಿಸಿದರು.
ಅಹಲ್ಯಾಬಾಯಿ ಹೋಳ್ಕರ್ ರಕ್ತವನ್ನು ಹಂಚಿಕೊಂಡಿರುವ ಸಿದ್ದರಾಮಯ್ಯನವರೇ ನೀವು ಈಗ ಔರಂಗ್ಜೇಬನ ಕಡೆ ತಿರುಗಿದ್ದೀರಿ. ರಾಜ್ಯ, ರಾಷ್ಟ್ರದ ಬಗ್ಗೆ ಕಿಂಚಿತ್ತಾದರೂ ಆಲೋಚನೆ ಇದಿಯಾ ಎಂದ ಅವರು, ನರೇಂದ್ರಮೋದಿಯವರು ವಿಶ್ವನಾಯಕರಾದರೆ, ಮುಸ್ಲಿಂರ ಓಲೈಕೆ ಮಾಡಿ ಸಿದ್ದರಾಮಯ್ಯ ಪಾಕಿಸ್ತಾನ ಟಿ.ವಿ.ಗಳಲ್ಲಿ ರಾರಾಜಿಸಿ ಆ ದೇಶದ ನಾಯಕರಾಗಿದ್ದಾರೆ.
| ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ, ರಾಷ್ಟ್ರ ಭಕ್ತರ ಬಳಗದ ಸಂಚಾಲಕರು
ಮುಸ್ಲಿಂ ಓಲೈಕೆಯ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ವಸತಿ ಸಚಿವ ಜಮೀರ್ ಅಹಮದ್ ಖಾನ್ ಈ ಮೂವರನ್ನು ಜೈಲಿಗೆ ಕಳುಹಿಸಬೇಕು. ಮಂಗಳೂರಿನಲ್ಲಿ ಕೇವಲ ಓರ್ವ ಮುಸ್ಲಿಂನ ಹತ್ಯೆಯಾಗಿದ್ದಕ್ಕೆ ಇಡೀ ಕಾಂಗ್ರೆಸ್ ಪಟಾಲಂ ಮಂಗಳೂರಿಗೆ ದೌಡಾಯಿಸಿತ್ತು. ಆದರೆ ರಾಜ್ಯದಲ್ಲಿ ಅದಕ್ಕೂ ಮೊದಲು 15 ಹಿಂದೂಗಳ ಕೊಲೆಯಾದಾಗ ಎಲ್ಲಿ ಹೋಗಿದ್ರೀ ಎಂದು ಕಿಡಿಕಾರಿದರು.
ನಗರಸಭೆ ಮಾಜಿ ಅಧ್ಯಕ್ಷ ಎಂ.ಶಂಕರ್, ಕೆ.ಸಿ.ನಟರಾಜ್ ಭಾಗವತ್ ಮಾತನಾಡಿದರು. ಪ್ರತಿಭಟನೆಯಲ್ಲಿ ಯುವ ಮುಖಂಡ ಕೆ.ಈ.ಕಾಂತೇಶ್, ಪ್ರಮುಖರಾದ ಶೇಷಾಚಲ, ರಮೇಶ್ ಬಾಬು, ಸುವರ್ಣಾ ಶಂಕರ್, ಮೋಹನ್ ಜದವ್, ಮಹಾಲಿಂಗಯ್ಯ ಶಾಸ್ತ್ರಿ, ಶ್ರೀಕಾಂತ್, ವಾಸುದೇವ ಮೊದಲಾದವರಿದ್ದರು.