
ಶಿವಮೊಗ್ಗ : ಶಿವಮೊಗ್ಗದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಫೆಬ್ರವರಿ 24 ರಿಂದ ಪ್ರಾರಂಭವಾಗಿದ್ದು, ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಭಕ್ತರು ಜಾತ್ರೆಗೆ ಆಗಮಿಸಿ ದೇವಿಯ ದರ್ಶನ ಪಡೆದು ಭಕ್ತಿ ಭಾವ ಮೆರೆದಿದ್ದಾರೆ.

ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಯು ಶಿವಮೊಗ್ಗ ಮತ್ತು ನೆರೆಯ ಜಿಲ್ಲೆ, ರಾಜ್ಯಗಳಿಂದ ನೂರಾರು ಭಕ್ತರನ್ನು ಆಕರ್ಷಿಸುತ್ತದೆ. ಇಂದು ಕೂಡ ಮಾರಿ ಗದ್ದುಗೆಯಲ್ಲಿ ಪೂಜೆ, ಮಡಿಲಕ್ಕಿ ಅರ್ಪಣೆ, ಹರಕೆ ಕೋಳಿ ಸಮರ್ಪಣೆ ನಡೆಯಿತು. ಭಕ್ತರ ಆಗಮನ ಇಂದು ಕೂಡ ಹೆಚ್ಚಾಗಿತ್ತು. ಸರದಿ ಸಾಲಲ್ಲಿ ನಿಂತು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.
ತವರು ಮನೆಯ ಉತ್ಸವದೊಂದಿಗೆ ಗದ್ದುಗೆ ಪ್ರವೇಶ ಮಾಡಿದ ಶ್ರೀ ಮಾರಿಕಾಂಬೆಯನ್ನು ನೋಡಲು ಜನ ಜಾತ್ರೆಯೇ ನೆರೆದಿದ್ದು, ದೇವಿಯನ್ನು ನೋಡಲು ಎರಡು ಕಣ್ಣುಗಳು ಸಾಲದಾಗಿತ್ತು. ಜೊತೆಗೆ ದೇವಸ್ಥಾನದ ಸುತ್ತಮುತ್ತ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಕೂಡ ಬಲು ಜೋರಾಗಿದೆ.

ಪ್ರತಿದಿನವೂ ವಿವಿಧ ಸಮಾಜದವರು ಸರದಿಯಂತೆ ಪೂಜೆ ನೆರವೇರಿಸುತ್ತಿದ್ದಾರೆ. ಪ್ರಮುಖವಾಗಿ ವಾಲ್ಮೀಕಿ, ಉಪ್ಪಾರ, ಮಡಿವಾಳ ಸಮಾಜದವರು ನಾಲ್ಕು ದಿನಗಳ ಕಾಲ ಗದ್ದುಗೆಯಲ್ಲಿ ಅಮ್ಮನವರಿಗೆ ಪೂಜೆ ಸಲ್ಲಿಸುತ್ತಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ ಸಂಜೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ರಾಜ್ಯದ ವಿವಿಧೆಡೆಯಿಂದ ಹಬ್ಬಕ್ಕೆ ನೆಂಟರು ಭಕ್ತರು ಆಗಮಿಸುತ್ತಿದ್ದಾರೆ. ಇಂದು ಕೂಡ ಹಬ್ಬದ ಸಂಭ್ರಮ ಮನೆಗಳಲ್ಲಿ ಜೋರಾಗಿದೆ.

ಮಾರ್ಚ್ 6 ರಿಂದ 8 ರವರೆಗೆ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಕೂಡ ಆಯೋಜಿಸಲಾಗಿದೆ. ಜಾತ್ರೆಯು ನಾಳೆ (ಫೆ.28 ರಂದು) ಶನಿವಾರ ರಾತ್ರಿ ಅಮ್ಮನವರನ್ನು ವನಕ್ಕೆ ತೆಗೆದುಕೊಂಡು ಹೋಗುವ ಮೂಲಕ ತೆರೆ ಬೀಳಲಿದೆ.