
ಶಿವಮೊಗ್ಗ : ನಗರದ ಶಾಂತಿನಗರ (ರಾಗಿಗುಡ್ಡ)ದ ಬಂಗಾರಪ್ಪ ಬಡಾವಣೆಯಲ್ಲಿ ನೂತನವಾಗಿ ರಾಷ್ಟ್ರಭಕ್ತರ ಬಳಗದಿಂದ ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾಪಿಸಿದ ವಿಜಯ ಗಣಪತಿ ಮತ್ತು ಶ್ರೀ ವಾಸುಕಿ ನಾಗರ ದೇವರ ದೇವಾಲಯ ನ.02 ಮತ್ತು 03 ರಂದು ಅನೇಕ ಧಾರ್ಮಿಕ ಕಾರ್ಯಕ್ರಮಗಳಿಂದ ಉದ್ಘಾಟನೆಗೊಳ್ಳಲಿದೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಾಷ್ಟ್ರಭಕ್ತರ ಬಳಗದ ಮುಖಂಡ ಮೋಹನ್ ಜಾದವ್, ಜುಲೈ 5 ರಂದು ಒಬ್ಬ ದುಷ್ಕರ್ಮಿ ತನ್ನ ಮನೆ ಎದುರು ದೇವಸ್ಥಾನವಿದೆ ಎಂದು ಅದನ್ನು ಕುಡಿದ ಮತ್ತಿನಲ್ಲಿ ಕಾಲಿನಿಂದು ಒದ್ದು ಭಗ್ನಗೊಳಿಸಿ, ಬಡಾವಣೆಯಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದಾಗ, ಕೆ.ಎಸ್.ಈಶ್ವರಪ್ಪ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳು ಈ ದುಷ್ಕೃತ್ಯ ನಡೆಸಿದ ವ್ಯಕ್ತಿ ವಿರುದ್ಧ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.
ಅದರ ಪರಿಣಾಮವಾಗಿ ಕಾನೂನು ರೀತಿಯಲ್ಲಿ ಅಧಿಕಾರಿಗಳು ಆತನಿಗೆ ಶಿಕ್ಷೆ ನೀಡಿದ್ದಾರೆ. ಅದನ್ನು ರಾಗಿಗುಡ್ಡದ ಜನತೆ ಜಾತಿ-ಮತ-ಧರ್ಮ ಮರೆತು ಖಂಡಿಸಿ, ಇಂದು ಈ ದೇವಸ್ಥಾನ ಪುನರ್ ನಿರ್ಮಾಣಕ್ಕೆ ಕೈಜೋಡಿಸಿದ ಪರಿಣಾಮವಾಗಿ ಇಂದು ಸುಂದರವಾದ ದೇವಸ್ಥಾನ ನಿರ್ಮಾನವಾಗಿದೆ ಎಂದರು.
ದೇವಸ್ಥಾನದ ಪುನರ್ ಪ್ರತಿಷ್ಠಾಪನೆಯಲ್ಲಿ ದಿವ್ಯ ಸಾನಿಧ್ಯವನ್ನು ಶಿವಮೊಗ್ಗ ಬೆಕ್ಕಿನ ಕಲ್ಮಠದ ಶ್ರಿ ಮನ್ಮಹರಾಜ ನಿರಂಜನ ಜಗದ್ಗುರು ಡಾ. ಶ್ರೀ ಮಲ್ಲಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಶ್ರೀ ಕ್ಷೇತ್ರ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಶ್ರೀ ಅಭಿನವ ಶಂಕರಭಾರತೀ ಮಹಾಸ್ವಾಮಿಗಳು ವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಜಿ.ಪಂ.ಮಾಜಿ ಸದಸ್ಯರಾದ ಕೆ.ಈ.ಕಾಂತೇಶ್, ಬಡಾವಣೆಯ ಮುಖಂಡರು ಮತ್ತು ನಿವಾಸಿಗಳು ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರ ಭಕ್ತರ ಬಳಗದ ಪ್ರಮುಖರಾದ ಈ.ವಿಶ್ವಾಸ್, ಕುಮಾರ್, ಗೋವಿಂದಪ್ಪ, ಟಾಕ್ರಾ ನಾಯ್ಕ್, ನಾಗರಾಜ್, ಪ್ರಕಾಶ್, ಪ್ರಶಾಂತ್, ರಾಗಿಗುಡ್ಡ ನಿವಾಸಿಗಳಾದ ಚಂದ್ರು, ಮಲ್ಲೇಶ್, ಜಯರಾಮ್ ಸೇರಿದಂತೆ ಇನ್ನಿತರು ಇದ್ದರು.