
ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ರಸ್ತೆ ಬದಿಯ ವಾಹನ ನಿಲುಗಡೆ ಸಮಸ್ಯೆಯನ್ನು ಬಗೆಹರಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದರೂ ಸಹ ಸಮಸ್ಯೆ ಸಂಪೂರ್ಣ ಬಗೆಹರಿಯದೇ, ವಾಹನ ಸವಾರರು ನಗರದ ಪ್ರಮುಖ ರಸ್ತೆಗಳಲ್ಲಿ ಸಮಸ್ಯೆಯನ್ನು ಎದುರಿಸುವಂತಾಗಿದೆ.
ನಗರದ ಶಂಕರಮಠ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡುವುದು, ಅದರಲ್ಲಿಯೂ ನಾಲ್ಕು ಚಕ್ರಗಳ ವಾಹನಗಳನ್ನು ನಿಲ್ಲಿಸುವುದರಿಂದ ಪಾದಚಾರಿಗಳ ಸಂಚಾರಕ್ಕೆ ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ಬರೋಬ್ಬರಿ ಅರ್ಧದಷ್ಟು ರಸ್ತೆಯನ್ನು ನಾಲ್ಕು ಚಕ್ರಗಳ ವಾಹನ ನಿಲುಗಡೆಗೆ ಮೀಸಲಿರಿಸಿದಂತಾಗಿದ್ದು, ಇದು ವಾಹನ ಸವಾರರಿಗೆ ಸವಾಲಾದಂತಾಗಿದೆ.

ಸುಮಾರು 20 ರಿಂದ 30 ಅಡಿ ಅಗಲವಿರುವ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ಮಾಡುವುದರಿಂದ ರಸ್ತೆಯ ಜಾಗ ಕುಗ್ಗುತ್ತದೆ. ಪ್ರತಿನಿತ್ಯ ಜನ ಸಂದಣಿ ಹೊಂದಿರುವ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಸಿಟಿ ಬಸ್ ಗಳು, ಶಾಲಾ ವ್ಯಾನ್ ಗಳು ಮತ್ತು ಆಟೋರಿಕ್ಷಾಗಳು ಸೇರಿದಂತೆ ಮಕ್ಕಳನ್ನು ಕರೆದುಕೊಂಡು ಹೋಗಲು ಬರುವ ಪೀಕ್ ಸಮಯದಲ್ಲಿ ಕೆಲವೊಮ್ಮೆ, ರಸ್ತೆಯ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಈ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳನ್ನು ಓಡಿಸುವುದು ಸಹ ಕಷ್ಟಕರವಾಗುತ್ತದೆ.
ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸುವುದು ರಸ್ತೆ ಬಳಕೆದಾರರನ್ನು ಮತ್ತು ಪಾದಚಾರಿಗಳನ್ನು ಕಾಡುವ ಹೊಸ ಸಮಸ್ಯೆಯಾಗಿದೆ. ಅಲ್ಲದೇ ಪಾದಚಾರಿಗಳು ರಸ್ತೆಯ ಮಧ್ಯ ಭಾಗದಲ್ಲಿ ಸಂಚರಿಸುವಂತಾಗಿದ್ದು, ಇನ್ನೂ ವಾಹನಗಳಂತೂ ರಸ್ತೆಗಳಲ್ಲಿ ವಾಹನಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದರಿಂದ ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ರಸ್ತೆ ಬದಿಯ ಪಾರ್ಕಿಂಗ್ ಮತ್ತೊಂದು ಬಗೆಯ ಸಮಸ್ಯೆಯಾಗಿದೆ.

ನಗರದ ಕೆಲವು ರಸ್ತೆಗಳಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ಶಿವಮೊಗ್ಗ ಸ್ಮಾರ್ಟ್ ಸಿಟಿ ಅಭಿವೃದ್ಧಿಪಡಿಸಿದ ಪಾರ್ಕಿಂಗ್ ಸ್ಥಳಗಳನ್ನು ಬಳಸಿಕೊಂಡ ನಂತರ ಹಾಗೂ ಟ್ರಾಫಿಕ್ ಪೊಲೀಸರು ನಾಲ್ಕು ಚಕ್ರದ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದ್ದರೂ ಈ ಕ್ರಮಗಳಿಂದ ಪಾರ್ಕಿಂಗ್ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.
