
ಶಿವಮೊಗ್ಗ : ಬಾಲ್ಯದಲ್ಲೇ ಕಣ್ಣುಗಳ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯ ಎಂದು ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಸಮುದಾಯ ಆರೋಗ್ಯ ವಿಭಾಗದ ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ಬಾಲು ಹೇಳಿದರು.
ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಮಾಸಾಚರಣೆಯ ಅಂಗವಾಗಿ ನಗರದ ಸಹ್ಯಾದ್ರಿ ಪ್ರೌಢಶಾಲೆಯಲ್ಲಿ ಸುಬ್ಬಯ್ಯ ಮೆಡಿಕಲ್ ಕಾಲೇಜು, ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್, ಫ್ರೆಂಡ್ಸ್ ಸೆಂಟರ್ ನೇತ್ರ ಮತ್ತು ರಕ್ತ ಭಂಡಾರ (ರಿ) ಹಾಗೂ ಸಹ್ಯಾದ್ರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಮಾಹಿತಿ ಶಿಬಿರದಲ್ಲಿ ಮಾತನಾಡಿದ ಅವರು, ಕಣ್ಣು ದೇಹದ ಅತ್ಯಂತ ಸೂಕ್ಷ್ಮವಾದ ಅಂಗವಾಗಿದೆ. ಇಂದಿನ ದಿನಗಳಲ್ಲಿ ಅರಿವಿನ ಕೊರತೆ ಹಾಗೂ ಮೂಢನಂಬಿಕೆಗಳಿಂದ ಅನೇಕ ಮಕ್ಕಳು ನಿಯಮಿತವಾಗಿ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಇದರಿಂದ ದೃಷ್ಟಿ ಸಮಸ್ಯೆಗಳು ಉಲ್ಬಣಗೊಂಡು ಅವರ ವಿದ್ಯಾಭ್ಯಾಸದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ಬಾಲ್ಯದಲ್ಲಿಯೇ ಕಣ್ಣಿನ ತಪಾಸಣೆ ನಡೆಸಿ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಅವಶ್ಯಕ ಎಂದು ಅವರು ತಿಳಿಸಿದರು.
ಆಗಸ್ಟ್ ತಿಂಗಳನ್ನು ಮಕ್ಕಳ ಕಣ್ಣಿನ ಆರೋಗ್ಯ ಮತ್ತು ಸುರಕ್ಷತಾ ತಿಂಗಳಾಗಿ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಮಕ್ಕಳಿಗೆ ಕಣ್ಣಿನ ಸುರಕ್ಷತೆ, ಉತ್ತಮ ಕಣ್ಣಿನ ಆರೈಕೆ ಪದ್ಧತಿಗಳು ಹಾಗೂ ಡಿಜಿಟಲ್ ಪರದೆಗಳ ಬಳಕೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಬೆಂಬಲಿತ ಕೃತಕ ಬುದ್ಧಿಮತ್ತೆ ಆಧಾರಿತ ಡಬ್ಲ್ಯೂಹೆಚ್ಓ ಐಸ್ ಡಿಜಿಟಲ್ ಆ್ಯಪ್ ಬಳಸಿ ಶಾಲಾ ಮಕ್ಕಳ ಕಣ್ಣುಗಳ ತಪಾಸಣೆ ನಡೆಸಲಾಯಿತು. ವಿಶೇಷವಾಗಿ ವಕ್ರೀಭವನ ದೋಷಗಳು ಸೇರಿದಂತೆ ವಿವಿಧ ದೃಷ್ಟಿ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಅಗತ್ಯವಿರುವ ಮಕ್ಕಳನ್ನು ಮುಂದಿನ ಹಂತದ ನೇತ್ರ ತಪಾಸಣೆಗೆ ಶಿಫಾರಸು ಮಾಡಲಾಯಿತು.
ಜಿಲ್ಲಾ ಕಾರ್ಯಕ್ರಮಾಧಿಕಾರಿಗಳಾದ ಡಾ. ಗುಡದಪ್ಪ ಕಸಬಿ, ಫ್ರೆಂಡ್ಸ್ ಸೆಂಟರ್ ನೇತ್ರ ಮತ್ತು ರಕ್ತ ಭಂಡಾರದ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾನೂರ್, ಚೇರ್ಮನ್ ನಾಗರಾಜ್ ವಿ, ರೋಟರಿ ಶಿವಮೊಗ್ಗ ಈಸ್ಟ್ ಅಧ್ಯಕ್ಷ ಶೇಷಗಿರಿ ಡಿ.ಕೆ., ಕಾರ್ಯದರ್ಶಿ ಮನೋಹರ್ ಆರ್., ಉಪಾಧ್ಯಕ್ಷ ಜಿ. ವಿಜಯಕುಮಾರ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ಟಿ.ಪಿ. ನಾಗರಾಜ್ ವಹಿಸಿದ್ದರು. ಗುರುಮೂರ್ತಿ ಗೌಡ, ಉಮ್ಮೆ ಸಲ್ಮಾ, ಇಂಟರಾಕ್ಟ್ ಕ್ಲಬ್ನ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಭಾಗವಿಸಿದ್ದು, ಶಿಬಿರದಲ್ಲಿ ಡಾ. ರಕ್ಷಿತ್, ಡಾ. ಶಿವ, ಡಾ. ನಿಹಾರಿಕಾ, ಡಾ. ಅಲ್ಸಾ, ಡಾ. ಭೂಮಿಕಾ ಆರ್., ಡಾ. ಭೂಮಿಕಾ ರಮೇಶ್, ಡಾ. ವಿನೋದ್, ಡಾ. ವಿಶಾಲ್, ಡಾ. ಆಕಾಶ್ ಯು., ಡಾ. ಆದಿತ್ಯ ಪಾಟೀಲ್, ಡಾ. ಅಚ್ಯುತ್, ಡಾ. ಆದಿತ್ಯ ನೆಲ್ಲಿ, ಡಾ. ಅಮೂಲ್ಯ ಡಿ. ಹಾಗೂ ಡಾ. ವಿವೇಕ್ ದತ್ತ ಸೇರಿದಂತೆ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ವೈದ್ಯರ ತಂಡ ಪಾಲ್ಗೊಂಡು ವಿದ್ಯಾರ್ಥಿಗಳ ನೇತ್ರ ತಪಾಸಣೆ ನಡೆಸಿತು.
