
ಶಿವಮೊಗ್ಗ : ಶಿವಮೊಗ್ಗ ನಗರದ ಬೈಪಾಸ್ ರಸ್ತೆಯ ಬಳಿಯ ವಾದಿ-ಎ-ವುದಾ ಬಡಾವಣೆ ಒಂದರಲ್ಲಿ ಕಳೆದ (24 ಏಪ್ರಿಲ್) ರಾತ್ರಿ ಅಪ್ರಾಪ್ತ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ದಾಳಿ ವೇಳೆ ಅಪ್ರಾಪ್ತನ ತಲೆಯಲ್ಲಿ ಮಚ್ಚು ಸಿಲುಕಿತ್ತು. ಮಚ್ಚು ಸಿಲುಕಿದ ಸ್ಥಿತಿಯಲ್ಲಿಯೇ ಆತನನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿದೆ.
ಅಪ್ರಾಪ್ತ ಯುವಕನ ಮೇಲೆ ದಾಳಿ :
ಕಳೆದ ರಾತ್ರಿ (ಶುಕ್ರವಾರ ರಾತ್ರಿ) 10.00 ಗಂಟೆ ಹೊತ್ತಿಗೆ ಸುಮಾರು 6 ಜನ ಯುವಕರ ಗುಂಪೊಂದು ಅಪ್ರಾಪ್ತ ಯುವಕನ (17 ವರ್ಷ) ಮೇಲೆ ದಾಳಿ ನಡೆಸಿದೆ. ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಈ ವೇಳೆ ಅಪ್ರಾಪ್ತನ ತಲೆಗೆ ಮಚ್ಚು ಬೀಸಿದ್ದು, ಅದು ಆತನ ತಲೆಯಲ್ಲೇ ಸಿಲುಕಿಕೊಂಡಿತ್ತು.
ಮಚ್ಚು ಸಹಿತ ಆಸ್ಪತ್ರೆಗೆ :
ದಾಳಿಯಿಂದ ತೀವ್ರ ಗಾಯಗೊಂಡಿದ್ದ ಯುವಕನನ್ನು ಸ್ಥಳೀಯರು ರಕ್ಷಿಸಿದ್ದಾರೆ. ತಲೆಗೆ ಸಿಲುಕಿದ್ದ ಮಚ್ಚು ಸಹಿತ ಅಪ್ರಾಪ್ತನನ್ನು ಆಟೋದಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಖಾಸಗಿ ಆಸ್ಪತ್ರೆಯಲ್ಲಿ ಗಂಭೀರ ಗಾಯಗೊಂಡಿರುವ ಆತನಿಗೆ ಚಿಕಿತ್ಸೆ ಮುಂದುವರೆದಿದೆ.
ಇನ್ನು, ಗಾಯಗೊಂಡಿರುವ ಯುವಕನಿಗೆ ಚಿಕಿತ್ಸೆ ಮುಂದುವರೆದಿದೆ. ಆತನ ಹೇಳಿಕೆ ಪಡೆದ ಬಳಿಕ ಘಟನೆಗೆ ನಿಖರ ಕಾರಣ ತಿಳಿಯಲಿದೆ. ಮತ್ತೊಂದೆಡೆ ದಾಳಿಕೋರರ ಪತ್ತೆ ಕಾರ್ಯ ನಡೆಯುತ್ತಿದೆ. ತುಂಗಾ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.