
ಶಿವಮೊಗ್ಗ : ಸಾರ್ವಜನಿಕರ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುವ ಪೊಲೀಸ್ ಇಲಾಖೆಯ ಮೂಲಭೂತ ಸೌಕರ್ಯಗಳನ್ನು ಬಲಪಡಿಸುವ ಉದ್ದೇಶದಿಂದ, 2025-26ನೇ ಸಾಲಿನ ವಿಧಾನ ಪರಿಷತ್ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿ, ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣೆಗೆ ಮಂಜೂರಾಗಿದ್ದ ನೂತನ ‘ಪೊಲೀಸ್ ಜೀಪನ್ನು’ ಇಂದು (ಗುರುವಾರ) ಅಧಿಕೃತವಾಗಿ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು.
ಇದನ್ನೂ ಓದಿ » ಸಕ್ರೆಬೈಲು ಆನೆ ಬಿಡಾರಕ್ಕೆ ಸಾರ್ವಜನಿಕರ ಪ್ರವೇಶ ತಾತ್ಕಾಲಿಕ ಬಂದ್: ಅರಣ್ಯ ಇಲಾಖೆ ಆದೇಶ
ನಗರದ ಮೆಗ್ಗಾನ್ ಆಸ್ಪತ್ರೆ ಮುಂಭಾಗದಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ (ಎಸ್.ಪಿ. ಆಫೀಸ್) ಆವರಣದಲ್ಲಿ ಇಂದು ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಿಖಿಲ್ ಮತ್ತು ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಅವರ ಸಮ್ಮುಖದಲ್ಲಿ ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಅವರು ನೂತನ ವಾಹನಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದರು.
ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿವಮೊಗ್ಗ ನಗರದಲ್ಲಿ ದಿನೇ ದಿನೇ ಬೆಳೆಯುತ್ತಿರುವ ಅಪರಾಧಗಳ ನಿಯಂತ್ರಣ ಹಾಗೂ ಸಾರ್ವಜನಿಕರ ತುರ್ತು ಕರೆಗಳಿಗೆ ತ್ವರಿತವಾಗಿ ಸ್ಪಂದಿಸಲು ಪೊಲೀಸರಿಗೆ ಸುಸಜ್ಜಿತ ವಾಹನಗಳ ಅಗತ್ಯವಿದೆ.
– ಡಾ. ಧನಂಜಯ ಸರ್ಜಿ, ವಿಧಾನ ಪರಿಷತ್ ಶಾಸಕರು
ಇಲಾಖೆಯ ಬೇಡಿಕೆಗೆ ತಕ್ಷಣ ಸ್ಪಂದಿಸಿ ತಮ್ಮ ಅನುದಾನದಲ್ಲಿ ವಾಹನ ಒದಗಿಸಿದ ಡಾ. ಧನಂಜಯ ಸರ್ಜಿ ಅವರಿಗೆ ಪೊಲೀಸ್ ಇಲಾಖೆ ಹಾಗೂ ಶಿವಮೊಗ್ಗ ಜನತೆಯ ಪರವಾಗಿ ವಿಶೇಷ ಧನ್ಯವಾದಗಳು.
– ನಿಖಿಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು
ನೂತನ ವಾಹನ ಹಸ್ತಾಂತರಿಸಿ ಮಾತನಾಡಿದ ಡಾ. ಧನಂಜಯ ಸರ್ಜಿ ಅವರು, ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನನ್ನ 2025-26ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಜಮ್ ಪೋರ್ಟಲ್ ಮೂಲಕ 7.2 ಲಕ್ಷದಲ್ಲಿ ಜಯನಗರ ಪೊಲೀಸ್ ಠಾಣೆಗೆ ನೂತನ ಜೀಪನ್ನು ಒದಗಿಸಿದ್ದೇವೆ, ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಶೇ.22 ರಿಂದ 25 ರಷ್ಟು ವಾಹನದ ಕೊರತೆ ಇದೆ. ಜಯನಗರ ಪೊಲೀಸ್ ಠಾಣೆ ಇರುವ ಜಾಗಕ್ಕೆ ಒಂದು ಇತಿಹಾಸ ಇದೆ, ಠಾಣೆ ಇರುವ ಜಾಗದಲ್ಲಿ ಜಿಲ್ಲೆಯ ಮೊದಲ ನ್ಯಾಯಾಲಯ ಇತ್ತು. ನಮ್ಮ ಸರ್ಜಿ ಆಸ್ಪತ್ರೆಯ ವತಿಯಿಂದ ನಾವು ಜಿಲ್ಲಾ ಪೊಲೀಸರಿಗೆ ವಾರ್ಷಿಕ ಹೆಲ್ತ್ ಚೆಕ್ ಅಪ್ ಅನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಪೊಲೀಸರ ಒತ್ತಡದ ಕೆಲಸ ನಡುವೆ ತಮ್ಮ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು. ಮುಂದಿನ ದಿನಗಳಲ್ಲೂ ಇಲಾಖೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ನೂತನ ವಾಹನವನ್ನು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದ ಶಿವಮೊಗ್ಗ ಎಸ್.ಪಿ. ನಿಖಿಲ್ ಮಾತನಾಡಿ, ಪೊಲೀಸ್ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸಲು ಇಂತಹ ಮೂಲಭೂತ ಸೌಕರ್ಯಗಳ ಸೇರ್ಪಡೆ ಅತ್ಯಗತ್ಯ. ಸಾರ್ವಜನಿಕರ ರಕ್ಷಣೆಗೆ ನಮ್ಮ ಸಿಬ್ಬಂದಿ ಸದಾ ಸಿದ್ದರಿದ್ದು, ಈ ಹೊಸ ವಾಹನದಿಂದ ಜಯನಗರ ಠಾಣಾ ವ್ಯಾಪ್ತಿಯಲ್ಲಿ ಬೀಟ್ ವ್ಯವಸ್ಥೆಯನ್ನು (Beat System) ಮತ್ತಷ್ಟು ಚುರುಕುಗೊಳಿಸಲಾಗುವುದು. ಜಯನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಡಿ.ಸಿ. ಆಫೀಸ್, ನ್ಯಾಯಾಲಯ, ಸರ್ಕಾರಿ ಕಚೇರಿಗಳು ಇರುವುದರಿಂದ ಠಾಣೆಗೆ ವಾಹನ ಅವಶ್ಯಕತೆ ಇತ್ತು ಎಂದು ತಿಳಿಸಿದರು.
ಈ ವೇಳೆ ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಕಾರಿಯಪ್ಪ, ಡಿ.ವೈ.ಎಸ್.ಪಿ ಸಂಜೀವ್ ಕುಮಾರ್, ಜಯನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರವಿ ಪಾಟೀಲ್, ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಅನಿಲ್, ಪ್ರಮುಖರಾದ ಬೇಡರ ಹೊಸಹಳ್ಳಿ ಸಂದೀಪ್, ಗಿರೀಶ್ ಮಲ್ಲಾಪುರ, ಶುಭಕರ್, ಸಂತೆಕಡೂರು ಹರೀಶ್, ರೇಣುಕಾರಾಧ್ಯ , ಸರ್ಜಿ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಮುರುಳೀಧರ್ ರಾವ್ ಕುಲಕರ್ಣಿ, ವೈದ್ಯರಾದ ಡಾ. ವಿಜಯ ಕುಮಾರ ಮಾಯೆರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು
ಇದನ್ನೂ ಓದಿ » ಮಂಗಳವಾರವೂ ಹುಲಿ-ಸಿಂಹಧಾಮ ವೀಕ್ಷಣೆಗೆ ಅವಕಾಶ