
ಶಿವಮೊಗ್ಗ : ಸುಮಾರು 37 ವರ್ಷಗಳ ಹಿಂದೆ ನಡೆದಿದ್ದ ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಂದಿನಿಂದ ತಲೆಮರೆಸಿಕೊಂಡಿದ್ದ ರೌಡಿ ಆರೋಪಿಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸರು ಕೇರಳದಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಂಗಳೂರು ತಾಲೂಕಿನ ಬಜ್ಪೆಯ ಪೆರ್ರ ಮೂಲದ ಅಬ್ದುಲ್ ಖಾದರ್ ಅಲಿಯಾಸ್ ಮೊಣು (57 ವರ್ಷ) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಬಿಜೆಪಿ ಸಮಿತಿಯಿಂದ ಬರ ಅಧ್ಯಯನ: ನೀರು, ವಿದ್ಯುತ್ ಅಭಾವದಿಂದ ಕಂಗಾಲಾದ ರೈತರಿಂದ ಕಣ್ಣೀರಿನ ಅಹವಾಲು
1989ರಲ್ಲಿ ತೀರ್ಥಹಳ್ಳಿ ತಾಲೂಕಿನ ಮೃಗವಧೆ ಗ್ರಾಮದ ಗುಡ್ಡೆಕೊಪ್ಪದಲ್ಲಿ ಡಕಾಯಿತಿ ನಡೆದಿತ್ತು. ಈ ಕುರಿತು ಮಾಳೂರು ಪೊಲೀಸ್ ಠಾಣೆಯಲ್ಲಿ (ಗುನ್ನೆ ನಂ: 63/1989, ಕಲಂ 395 ಐಪಿಸಿ) ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ದಿನದಿಂದಲೂ ಆರೋಪಿ ಅಬ್ದುಲ್ ಖಾದರ್ ಪಾರಾಗಿ ತಲೆಮರೆಸಿಕೊಂಡಿದ್ದನು. ಈ ಸಂಬಂಧ ನ್ಯಾಯಾಲಯ ಆರೋಪಿಯನ್ನ ಬಂಧಿಸುವಂತೆ ಸೂಚಿಸಿತ್ತು.
ಆರೋಪಿಯು ಕೇರಳ ರಾಜ್ಯದ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ಸಂಗೋಡಿಯಲ್ಲಿ ತಲೆಮರೆಸಿಕೊಂಡು ವಾಸವಾಗಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರ ತಂಡ ಕೇರಳಕ್ಕೆ ತೆರಳಿ ಆರೋಪಿಯನ್ನು ದಸ್ತಗಿರಿ ಮಾಡಿದೆ.
ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್ಪಿ ಅರವಿಂದ ಕಲಗುಚ್ಚಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಮಾಳೂರು ವೃತ್ತ ಸಿಪಿಐ ರಾಜಶೇಖರ್ ಹಾಗೂ ಪಿಎಸ್ಐ ಸುನೀಲ್ ಬಿ.ಸಿ. ಅವರ ನಿರ್ದೇಶನದಂತೆ ಠಾಣೆಯ ಸಿಬ್ಬಂದಿಗಳಾದ ಮೇಘರಾಜ್ ಮತ್ತು ಅಭಿಲಾಶ್ ಅವರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶಿವಮೊಗ್ಗ ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಇದನ್ನೂ ಓದಿ » ಆ.01 ರಂದು ಶಿವಮೊಗ್ಗ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ