
ಶಿವಮೊಗ್ಗ : ಶ್ರಾವಣ ಮಾಸದಲ್ಲಿ ಅತ್ಯಂತ ವಿಜೃಂಭಣೆ ವೈಭವದಿಂದ ನಡೆಯುವ ನಗರದ ಪ್ರಸಿದ್ದ ಗುಡ್ಡಕಲ್ ಶ್ರೀ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವವು ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ಅತ್ಯಂತ ವೈಭವದಲ್ಲಿ ನಡೆಯಲಿದ್ದು, ಜಾತ್ರೆಗೆ ಸಂಬಂಧಿಸಿದಂತೆ ಅಂತಿಮ ಹಂತದ ತಯಾರಿಯೂ ಅತ್ಯಂತ ಭರದಿಂದ ನಡೆಯುತ್ತಿದೆ.
ನಗರದೆಲ್ಲೆಡೆ ಗುಡ್ಡಕಲ್ ಹರೋಹರ ಜಾತ್ರೆಯ ಪ್ರಯುಕ್ತ ಸ್ವಾಗತ ಕಮಾನುಗಳು, ಶುಭ ಕೋರುವ ಪ್ಲೆಕ್ಸ್ ಗಳು, ಬ್ಯಾನರ್ ಗಳು ರಾರಾಜಿಸುತ್ತಿವೆ. ದೇವಸ್ಥಾನದ ಸಮಿತಿ, ವಿವಿಧ ಪಕ್ಷಗಳ ರಾಜಕಾರಣಿಗಳು, ಸಂಘಟನೆಗಳು ಜಾತ್ರೆಗೆ ಶುಭ ಕೋರುವ ಪ್ಲೆಕ್ಸ್ ಗಳನ್ನು ನಗರದ ಪ್ರಮುಖ ಕಡೆಗಳಲ್ಲಿ ಅಳವಡಿಸಿವೆ.
ಗುಡ್ಡಕಲ್ಲು ಶ್ರೀ ಬಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಳಿ ಜಾತ್ರೆಗೆ ಅಂತಿಮ ಹಂತದ ಸಿದ್ದತೆಗಳು ನಡೆಯುತ್ತಿವೆ. ವಿವಿಧ ಮಳಿಗೆಗಳು, ಆಟಿಕೆಗಳು ಸಿದ್ಧಗೊಳ್ಳುತಿವೆ. ಮುಖ್ಯ ರಸ್ತೆಯಿಂದ ದೇಗುಲವನ್ನು ಸಂಪರ್ಕಿಸುವ ರಸ್ತೆಯಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಮೊದಲನೆಯ ದಿನ ಭರಣಿ ಕಾವಡಿ ಅಂತಲೂ, ಎರಡನೆಯ ದಿನವನ್ನು ಆಡಿ ಕೃತ್ತಿಕೆ ಜಾತ್ರೆ ನಡೆಯುತ್ತದೆ. ಈ ಕುರಿತು ಎಲ್ಲೆಡೆ ಪ್ರಚಾರ ಕಾರ್ಯ ಭರದಿಂದ ನಡೆಯುತ್ತಿದೆ. ಆಟೋಗಳಲ್ಲಿ ಮೈಕ್ ಅಳವಡಿಸಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ.
