
ಶಿವಮೊಗ್ಗ : ಹಾಸನದಲ್ಲಿ ನಡೆದ ರೋಟರಿ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, 2025-26ನೇ ಸಾಲಿನಲ್ಲಿ ಕೈಗೊಂಡ ವಿವಿಧ ಸಮಾಜಮುಖಿ ಕಾರ್ಯಗಳನ್ನು ಪರಿಗಣಿಸಿ ರೋಟರಿ ಕ್ಲಬ್ ಶಿವಮೊಗ್ಗ ಉತ್ತರಕ್ಕೆ 33 ಜಿಲ್ಲಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕ್ಲಬ್ ಅಧ್ಯಕ್ಷ ಬಸವರಾಜಪ್ಪ ಹಾಗೂ ಅವರ ತಂಡ ಪ್ರಶಸ್ತಿಗಳನ್ನು ಸ್ವೀಕರಿಸಿದರು.
ವರ್ಷಪೂರ್ತಿ ರೋಟರಿಯ ದತ್ತಿ ನಿಧಿಯ ಮೂಲಕ ಶಾಲೆ ಮತ್ತು ಕಾಲೇಜುಗಳಿಗೆ ಮೂಲಭೂತ ಸೌಲಭ್ಯಗಳ ಕಲ್ಪನೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಹಾಗೂ ಪೀಠೋಪಕರಣಗಳ ಒದಗಿಕೆ, ಮಹಿಳಾ ಸಬಲೀಕರಣ ಕಾರ್ಯಕ್ರಮಗಳು, ಯುವಜನರಿಗೆ ನಾಯಕತ್ವ ತರಬೇತಿ, ಮಕ್ಕಳ ಹಾಗೂ ತಾಯಂದಿರಿಗೆ ಪೌಷ್ಟಿಕ ಆಹಾರ ವಿತರಣೆ, ರೋಗ ನಿರ್ಮೂಲನಾ ಕಾರ್ಯಗಳು, ವಿವಿಧ ಕ್ಷೇತ್ರಗಳ ನುರಿತ ವೃತ್ತಿಪರರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ, ಪರಿಸರ ಸಂರಕ್ಷಣೆಯ ಉದ್ದೇಶದಿಂದ ರೋಟರಿ ಬಯೋಡೈವರ್ಸಿಟಿ ಅರಣ್ಯದಲ್ಲಿ ಹಸಿರೀಕರಣ, ಸಮಾಜದ ದುರ್ಬಲ ವರ್ಗಗಳಿಗೆ ಆರ್ಥಿಕ ನೆರವು ಮತ್ತು ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಕ್ಲಬ್ ಯಶಸ್ವಿಯಾಗಿ ನಡೆಸಿದೆ.
ಈ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದ ರೋಟರಿ ಜಿಲ್ಲಾ ಗವರ್ನರ್ ಬಿ.ಎಂ. ಭಟ್, ಸಮಾಜದ ಅಭಿವೃದ್ಧಿಗೆ ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ನೀಡುತ್ತಿರುವ ಕೊಡುಗೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.
ಸಮಾರಂಭದಲ್ಲಿ ಪಿಡಿಜಿ ಅಭಿನಂದ ಸೆಟ್ಟಿ, ಪಾಲಾಕ್ಷ್, ದೇವಾನಂದ, ರಾಜಾರಾಮ ಭಟ್ಟ, ಡಿ.ಎಸ್. ರವಿ, ಅಸಿಸ್ಟೆಂಟ್ ಗವರ್ನರ್ ಕೆ.ಪಿ. ಸೆಟ್ಟಿ, ಮಾಜಿ ಅಧ್ಯಕ್ಷ ಬಸವರಾಜಪ್ಪ, ಶಾರದಾ, ಅಧ್ಯಕ್ಷ ಡಾ. ಶಿವಕುಮಾರ, ಕಾರ್ಯದರ್ಶಿ ಶ್ರೀಧರ ಎನ್., ಯು.ರವೀಂದ್ರನಾಥ ಐತಾಳ, ನಾಗರಾಜ ಎಸ್.ಆರ್., ವಲಯ ಕಾರ್ಯದರ್ಶಿ ಮೋಹನ ಹೆಚ್.ಎಸ್., ಧತ್ತಾತ್ತಿ ಎಸ್., ಶಾರದಾ ಹಾಗೂ ವೆಂಕಟೇಶ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.