
ಶಿವಮೊಗ್ಗ : ತಾಂತ್ರಿಕ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಅದೃಷ್ಟವಂತರು. ಇಂದಿನ ವಿಜ್ಞಾನ ತಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಆದರೆ ಇದುವರೆವಿಗೂ ರಕ್ತಕ್ಕೆ ಪರ್ಯಾಯ ವ್ಯವಸ್ಥೆ ದೊರಕಿಲ್ಲ. ರಕ್ತದಾನ ಶ್ರೇಷ್ಠದಾನ ಎಂದು ಡಿವೈಎಸ್ ಪಿ ಸಂಜೀವ್ ಕುಮಾರ್ ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ, ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ, ರೋಟರಿ ಕ್ಲಬ್, ಶಿವಮೊಗ್ಗ ಜ್ಯುಬಿಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಯುವ ರೆಡ್ ಕ್ರಾಸ್ ಘಟಕ ಜವಾಹರಲಾಲ್ ನೆಹರು ತಾಂತ್ರಿಕ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಇಂದು ಜೆ. ಎನ್.ಎನ್.ಸಿ. ಕಾಲೇಜಿನ ಲೈಬ್ರೆರಿ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ-2027 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉತ್ತಮವಾದ ವಿಚಾರಗಳ ಕಡೆಗೆ ಗಮನ ಹರಿಸಬೇಕು. ಮತ್ತು ಭರಿಸುವ ಹಾಗೂ ದೇಹಕ್ಕೆ ಹಾನಿಕಾರಕವಾಗುವ ವಸ್ತುಗಳಿಂದ ದೂರ ಉಳಿದು, ರಸ್ತೆ ಸುರಕ್ಷಿತ ವಾಹನ ಚಾಲನೆಗೆ ಹೆಚ್ಚಿನ ಮಹತ್ವ ನೀಡಿದಾಗ, ಸಮಾಜ ಸುರಕ್ಷಿತವಾಗಿರಲು ಸಹಕಾರಿ. ಸ್ವಂತ ಉದ್ಯಮ ಸ್ಥಾಪಿಸಿ, ಉದ್ಯೋಗ ದಾತರಾಗಿ. ಆದಾಯ ಪಡೆಯುವುದಕ್ಕಿಂತ, ನೀಡುವುದರಲ್ಲಿ ಹೆಚ್ಚಿನ ಸಂತೋಷವಿದೆ. ವಿದ್ಯಾವಂತರು ಕೃಷಿ ಚಟುವಟಿಗಳಲ್ಲಿ ತಾಂತ್ರಿಕ ನೆರವು ನೀಡಿ ಆರ್ಥಿಕವಾಗಿ ದೇಶ ಸದೃಡವಾಗಲು ಶ್ರಮಿಸಿ ಎಂದು ಎಂದು ಕಿವಿ ಮಾತು ಹೇಳಿದರು.
ಕಳೆದ ಹದನೈದು ವರ್ಷದಿಂದ ಇಲ್ಲಿ ರಕ್ತದಾನ ಶಿಬಿರ ಏರ್ಪಡಿಸಿ ಯಶಸ್ವಿಯಾಗಿದ್ದೇವೆ. ವಿದ್ಯಾರ್ಥಿಗಳು ಇಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ, ಮುಂದೆ ಜೀವನದಲ್ಲಿಯೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೀರಿ. ಇಂತಹ ಪವಿತ್ರ ಕಾರ್ಯಗಳಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯ.
– ಅಶ್ವಥ್ ಬಿ.ಎಸ್., ರೋಟರಿ ಜ್ಯುಬಿಲಿ ಅಧ್ಯಕ್ಷರು
ರಾಷ್ಟ್ರೀಯ ಶಿಕ್ಷಣ ಸಮಿತಿಯ ನಿರ್ದೇಶಕರಾದ ಡಾ. ಟಿ.ಆರ್.ಅಶ್ವಥನಾರಾಯಣ್ ಶೆಟ್ಟಿ ಮಾತನಾಡಿ, ಐವತ್ತು ವರ್ಷಗಳ ಹಿಂದೆ ರಕ್ತದಾನದ ಬಗ್ಗೆ ಇಷ್ಟು ಅನುಕೂಲ ಇರಲಿಲ್ಲ. ತಮ್ಮ ಶ್ರೀನಿಧಿಯಲ್ಲಿ ರಕ್ತದಾನಿಗಳ ದೂರವಾಣಿ ಸಂಖ್ಯೆ ಸಂಗ್ರಹಿಸಿ ಅವಶ್ಯಕರಿಗೆ ಸಹಾಯ ಮಾಡುತ್ತಿದ್ದೆವು. ಅಂದು ವೈಯುಕ್ತಿಕವಾಗಿ ನಲವತ್ತು ಬಾರಿ ರಕ್ತದಾನ ಮಾಡಿದ್ದನ್ನು ಸ್ಮರಿಸಿಕೊಂಡರು.
ಸ್ವಯಂ ಪ್ರೇರಿತ ರಕ್ತದಾನ ಸೇವಾ ಸಂಸ್ಥೆಯ ಅಧ್ಯಕ್ಷರಾದ ಧರಣೇಂದ್ರ ದಿನಕರ್ ಮಾತನಾಡಿ, ತಾವು ಈ ದಿನ ಒಂದು ನೂರ ಇಪ್ಪತ್ತೊಂದನೆ ಬಾರಿಗೆ ರಕ್ತದಾನ ಮಾಡುತ್ತಿದ್ದು, ಸುರೇಶ್ ರವರು ತ್ತೊಂಬತ್ತೆರಡು ಬಾರಿ, ವಾಗೇಶ್ ಎಂಬತ್ತು ಬಾರಿ, ಜಿ.ವಿಜಯಕಮಾರ್ ನಲವತ್ತೈದು ಬಾರಿ, ಬಸವರಾಜ್ ಮುವತ್ತೈದು ಬಾರಿ ಹೀಗೆ ಇನ್ನೂ ಹಲವರು ನಗರದಲ್ಲಿ ರಕ್ತದಾನ ಮಾಡಿದ್ದು ನಾವೆಲ್ಲ ಸೇರಿ ಸ್ವಯಂ ಪ್ರೇರಿತ ರಕ್ತದಾನಿಗಳ ಸಂಘದಿಂದ ಉತ್ತಮ ಕಾರ್ಯ ಮಾಡುತ್ತಿದ್ದು, ಈ ಉತ್ತಮ ಕಾರ್ಯಕ್ಕೆ ವಿದ್ಯಾರ್ಥಿಗಳ ಸಹಕಾರ ಕೂಡಾ ಬಹಳ ಮುಖ್ಯ ಎಂದರು.
ಸಮಾಜ ಸೇವರಾದ ನವ್ಯಶ್ರೀ ನಾಗೇಶ್ ಮಾತನಾಡಿ, ತಮ್ಮ ದೈನಂದಿನ ದುಡಿಮೆಯಲ್ಲಿ ಕೆಲವು ಭಾಗ ಪ್ರಕೃತಿ ರಕ್ಷಣೆಗೆ, ಇಂತಹ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವವರಿಗೆ ಸಹಕರಿಸಿ, ಸಮಾಜದಲ್ಲಿ ಅಳಿಲು ಸೇವೆ ಸಲ್ಲಿಸುವ ಮೂಲಕ ತೃಪ್ತಿ ಹೊಂದುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಎನ್.ಎನ್.ಸಿ. ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ.ವಿಜಯಕುಮಾರ್ ವಹಿಸಿದ್ದರು. ರೋಟರಿ ಜ್ಯುಬಿಲಿ ಅಧ್ಯಕ್ಷರಾದ ಅಶ್ವಥ್ ಬಿ.ಎಸ್., ರೋಟರಿ ಜಿ. ವಿಜಯ್ ಕುಮಾರ್ಎ, ಎನ್.ಎಸ್.ಎಸ್. ಅಧಿಕಾರಿ ಅರುಣ್ ಕುಮಾರ್, ಬಸವರಾಜ್, ರೋಟರಿ ಜ್ಯುಬಿಲಿ ಕಾರ್ಯದರ್ಶಿ ರೇವಣಸಿದ್ದಪ್ಪ, ಕಾಲೇಜ್ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.