
ಶಿವಮೊಗ್ಗ : ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರವು ರಾಜ್ಯ ಮಟ್ಟದ ತಜ್ಞ ವೈದ್ಯರ ಸಮ್ಮೇಳನಕ್ಕೆ ಸಜ್ಜಾಗುತ್ತಿದೆ. 2004 ನಂತರ 22 ವರ್ಷಗಳ ಬಳಿಕ ಅಸೋಸಿಯೇಷನ್ ಆಫ್ ಫಿಜಿಶಿಯನ್ಸ್ ಆಫ್ ಇಂಡಿಯಾ ಸಹ್ಯಾದ್ರಿ, ಶಾಖೆಯಿಂದ ಇದೇ ಮೊದಲ ಬಾರಿಗೆಶಿವಮೊಗ್ಗನಗರದಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದ್ದು, ಅದಕ್ಕೆ ಸಕಲ ಸಿದ್ದತೆಗಳು ನಡೆದಿವೆ.
ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯದ ಸಮ್ಮೇಳನ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಭಾಗವಹಿಸಲು ರಾಜ್ಯಾದ್ಯಂತ 2000ಕ್ಕೂ ಹೆಚ್ಚು ವೈದ್ಯರು ನೋಂದಾಯಿಸಿದ್ದು, ಅಂದಾಜು 2500 ತಜ್ಞ ವೈದ್ಯರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸಮ್ಮೇಳನದಲ್ಲಿ ನೂತನ ಆವಿಷ್ಕಾರ, ಚಿಕಿತ್ಸೆ, ಇತ್ಯಾದಿಗಳ ಬಗ್ಗೆ ಉಪನ್ಯಾಸ-ಚರ್ಚೆ, ಕಾರ್ಯಗಾರಗಳು ನಡೆಯಲಿವೆ.
– ಡಾ. ಪೃಥ್ವಿ ಬಿ.ಸಿ., ಸಮ್ಮೇಳನದ ಸಂಘಟನಾ ಕಾರ್ಯದರ್ಶಿ
ವೈದ್ಯಕೀಯ ಕ್ಷೇತ್ರದಲ್ಲಿನ ಹೊಸ ಅವಿಷ್ಠಾರಗಳ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುವ ಉದ್ದೇಶದ ಜತೆಗೆ ವೈದ್ಯಕೀಯ ಕ್ಷೇತ್ರದಲ್ಲಿ ನಾವು ಹೇಗೆ ಅದನ್ನು ಸಾರ್ವಜನಿಕರ ಆರೋಗ್ಯ ಸೇವೆಗೆ ಬಳಕೆ ಮಾಡಿಕೊಡಬೇಕೆನ್ನುವ ನಿಟ್ಟಿನಲ್ಲಿ ಈ ಸಮ್ಮೇಳನ ನಡೆಯುತ್ತಿದೆ. ಈಗಾಗಲೇ ಸಮ್ಮೇಳನಕ್ಕೆ ಹೊರ ಊರುಗಳಿಂದ ಬರುವವರಿಗೆ ಊಟ, ವಾಸ್ತವ್ಯ ಸೇರಿ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ.
– ಡಾ. ಮಹೇಶ್ ಮೂರ್ತಿ, ಸಮ್ಮೇಳನದ ಸಂಘಟನಾ ಖಜಾಂಚಿ
ಸಮ್ಮೇಳನದ ಸಂಘಟನೆಯ ಸಂಘಟನಾ ಕಾರ್ಯದರ್ಶಿ ಡಾ. ಪೃಥ್ವಿ.ಬಿ.ಸಿ. ಅವರು ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಕುರಿತು ಮಾಹಿತಿ ನೀಡಿದರು. ಅಸೋಸಿಯೇಷನ್ ಆಫ್ ಫಿಜಿಶಿಯನ್ಸ್ ಆಫ್ ಇಂಡಿಯಾ ಸಹ್ಯಾದ್ರಿ ಶಾಖೆ, ಶಿವಮೊಗ್ಗ ವೈದ್ಯ ಕೀಯ ಮಹಾವಿದ್ಯಾಲಯಹಾಗೂಸುಬ್ಬಯ್ಯ ವೈದ್ಯ ಕೀಯ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯ ದೊಂದಿಗೆ ಮೇ 8 ರಿಂದ 10 ರವರೆಗೆ ನಗರದಲ್ಲಿ ರಾಜ್ಯಮಟ್ಟದ ತಜ್ಞ ವೈದ್ಯರ ಸಮ್ಮೇಳನ, ಕಾಪಿಕಾನ್-2026 ಆಯೋಜಿಸಲಾಗಿದೆ ಎಂದು ವಿವರಿಸಿದರು.
ಮೇ 8 ರಂದು ಬೆಳಗ್ಗೆ 9.00 ಗಂಟೆಯಿಂದ 11.00 ಗಂಟೆಯವರೆಗೆ ಶಿವಮೊಗ್ಗದ ಜನತೆಗೆ ಮತ್ತು ವಿದ್ಯಾರ್ಥಿಗಳಿಗೆ ತುರ್ತು ಜೀವರಕ್ಷಕ ತರಬೇತಿ (ಸಿಪಿಆರ್) ಮತ್ತು ಕಾರ್ಯಾಗಾರವನ್ನು ಸಿಮ್ಸ್ನ ಕಮ್ಯುನಿಟಿ ಮೆಡಿಷನ್ ಹಾಲ್ ನಲ್ಲಿ ಆಯೋಜಿಸಲಾಗಿದೆ ಎಂದರು.
ಇದಾದ ಬಳಿಕ ಸಮ್ಮೇಳನದಲ್ಲಿ ಉಪನ್ಯಾಸಗಳು ನಡೆಯಲಿವೆ. ಸಂಜೆ 5.00 ಗಂಟೆಗೆ ಸಮ್ಮೇಳನದ ಉದ್ಘಾಟನೆ ಸಮಾರಂಭ ನಡೆಯಲಿದೆ. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕರು, ಖ್ಯಾತ ಹೃದ್ರೋಗ ತಜ್ಞರು ಹಾಗೂ ಸಂಸದರು ಆದ ಪದ್ಮಶ್ರೀ ಡಾ. ಸಿ. ಎನ್. ಮಂಜುನಾಥ್ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆಂದು ಡಾ. ಪೃಥ್ವಿ ಅವರು ತಿಳಿಸಿದರು.
ಸಮ್ಮೇಳನ ಸಂಘಟನಾ ಸಮಿತಿಯ ಅಧ್ಯಕ್ಷ ಡಾ.ಎಸ್.ಬಿ.ಹೆಗಡೆ ಮಾತನಾಡಿ, 2004 ರಲ್ಲಿ ಶಿವಮೊಗ್ಗದಲ್ಲಿ ಸಮ್ಮೇಳನ ನಡೆದಿತ್ತು. ಆದಾದ ಬಳಿಕ 22 ವರ್ಷದ ನಂತರ ಈ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನದಲ್ಲಿ ರಾಜ್ಯದ ಎಲ್ಲೆಡೆಯಿಂದ ತಜ್ಞ ವೈದ್ಯರುಗಳು ಭಾಗವಹಿಸಿ ಸಾವಿರಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳನ್ನು ಪ್ರಸ್ತುತ ಪಡಿಸಲಿದ್ದು, ಹೈದರಾಬಾದ್ನಿಂದ ಡಾ.ನಾಗೇಶ್ವರ ರೆಡ್ಡಿ, ದೆಹಲಿಯಿಂದ ಡಾ.ರಮಣಪುರಿ, ಚೆನ್ನೈನಿಂದ ಡಾ.ಸುರೇಶ್ಕುಮಾರ್, ದುಬೈನಿಂದ ಡಾ.ಧನರಾಜ್ ಸೇರಿದಂತೆ ದೇಶ-ವಿದೇಶಗಳಿಂದ ನುರಿತ ವೈದ್ಯರು ಉಪನ್ಯಾಸ ನೀಡಲು ಆಗಮಿಸಲಿದ್ದಾರೆ ಎಂದರು.
ಮೇ 8 ರ ಸಂಜೆ ಗಂಟೆಗೆ ಸಮಾದೇಶದ ಉದ್ಘಾಟನೆಯನ್ನು ಖ್ಯಾತ ಹೃದ್ರೋಗ ತಜ್ಞ ವೈದ್ಯ, ಪದ್ಮಶ್ರೀ ಡಾ.ಸಿ.ಎನ್ ಮಂಜುನಾಥ್ ರವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ. ಮಹಾಲಿಂಗಪ್ಪ ಬಿ., ಡಾ. ಜಿ.ನರಸಿಮುಲು, ಡಾ. ಜ್ಯೋತಿರ್ಮೋರ್ ಪಾಲ್, ಡಾ. ನಂದಿನಿ ಚಟರ್ಜಿ, ಡಾ. ವಿರೂಪಾಕ್ಷಪ್ಪ ವಿ. ಡಾ. ನಾಗೇಂದ್ರ ಎಸ್. ಇವರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಖಜಾಂಚಿ ಡಾ. ಮಹೇಶ್ ಮೂರ್ತಿ.ಬಿ.ಆರ್., ಡಾ. ಶ್ರೀಕಾಂತ್ ಎನ್. ಹೆಗಡೆ, ಡಾ. ರವೀಶ್.ಕೆ.ಆರ್., ಡಾ. ಪರಮೇಶ್ವರ್ ಎಸ್., ಡಾ. ಅರವಿಂದ್.ಸಿ.ಎಲ್. ಡಾ. ಪ್ರವೀಣ್ ದೇವರಭಾವಿ, ಡಾ. ರತ್ನಾಕರ್, ಡಾ. ಪಿ.ಕೆ.ಪ್ರೈ, ಡಾ. ಡಿ.ಜಿ.ಶಿವಕುಮಾರ್, ಡಾ. ಈಶ್ವರಪ್ಪ, ಡಾ. ರಮ್ಯ ಭಟ್ ಮತ್ತಿತರ ತಜ್ಞ ವೈದ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮೊದಲ ರಿವರ್ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂ ಶುಭಾರಂಭ, ಕೆ.ಎಸ್.ಈಶ್ವರಪ್ಪ ಇಂದು ಉದ್ಘಾಟನೆ